ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ದಸರಾ ಹಬ್ಬದ ವಿಶೇಷ: ಸಿಎಂ‌ ಬಣ್ಣನೆ

ಮೈಸೂರು: ರಾಜ್ಯದ ಜನರಿಗೆ‌ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ಈ‌ ಹಬ್ಬದ ವಿಶೇಷ ಎಂದು ಹೇಳಿದರು.

ಅರಮನೆ ಮುಂಭಾಗ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಜಂಬೂ‌ ಸವಾರಿಗೂ ಮೊದಲು ಸಾಂಪ್ರದಾಯಿಕ ನಂದಿ ಧ್ವಜಕ್ಕೆ ಶುಭ ಮಕರ‌‌ ಲಗ್ನದಲ್ಲಿ ಪುಷ್ಪನಮನ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಇದೊಂದು‌ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ ಸಿಎಂ, ಕಳೆದ ಬಾರಿ ಸರಿಯಾಗಿ ಮಳೆ ಆಗದೆ ಬರ ಪರಿಸ್ಥಿತಿ ಎದುರಾಗಿತ್ತು ಹಾಗಾಗಿ ಸರಳ ದಸರಾ ಆಚರಣೆ ಮಾಡಲಾಗಿತ್ತು ಎಂದು ಹೇಳಿದರು.

ಈ‌ ಬಾರಿ ರಾಜ್ಯಾದ್ಯಂತ ಚೆನ್ನಾಗಿ‌ ಮಳೆ ಆಗಿದೆ.ಎಲ್ಲೂ ಬರ ಪರಿಸ್ಥಿತಿ ಇಲ್ಲ ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪನವರಿಗೆ ಅದ್ಧೂರಿ ದಸರಾ ಆಚರಣೆಗೆ ಹೇಳಿದ್ದೆ.ಇದು ನಾಡಹಬ್ಬ ಅದ್ದೂರಿಯಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ‌ ಸಂದರ್ಭದಲ್ಲಿ ರಾಜ್ಯದ ಎಲ್ಲ ಜನತೆಗೆ ಶುಭ ಕೋರುತ್ತೇನೆ ಎಂದು ಸಿದ್ದು ತಿಳಿಸಿದರು.

ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ,ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿರರು ಸಾಥ್ ನೀಡಿದರು.