ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಬಾಬಾ ಕೊಲೆ ಸಾಕ್ಷಿ:ಡಿಕೆಶಿ

ಮೈಸೂರು: ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ನನಗೂ ಆತ್ಮೀಯರಾಗಿದ್ದರು, ನಮ್ಮ ಪಕ್ಷದಲ್ಲಿದ್ದಾಗ ಮಂತ್ರಿಯೂ ಅಗಿದ್ದರು ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದರು.

ಮೈಸೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ‌ ಡಿಸಿಎಂ,ಆದರೆ‌ ಈಗ ಬಾಬಾ ಸಿದ್ದಿಕಿ ಅವರ ಹತ್ಯೆಯಾಗಿದೆ, ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗಲಿದೆ,ಅಲ್ಲಿ ಶಾಂತಿ ಕಾಪಾಡುವ‌ ಅಗತ್ಯವಿದೆ ಮುಂಬೈನಲ್ಲಿ ನಡೆದ ಬಾಬಾ ಸಿದ್ದಿಕಿ ಕೊಲೆಯನ್ನು ಖಂಡಿಸುತ್ತೇನೆ. ಕೃತ್ಯ ಮಾಡಿದವರ ವಿರುದ್ಧ ಶೀಘ್ರ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಈ ಬಾರಿ ದಸರಾ ತುಂಬಾ ವಿಜೃಂಭಣೆಯಿಂದ ನಡೆಯಿತು. ಆದರೆ, ಜಂಬೂಸವಾರಿ ಆರಂಭವಾಗುವುದು ಸ್ವಲ್ಪ ತಡವಾಯಿತು. ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ನಮ್ಮ ಕುಟುಂಬದವರ ಸ್ಪರ್ಧೆ ಇಲ್ಲ, ನಾನೇ ಅಭ್ಯರ್ಥಿ ಎಂದು ಮತ ಕೇಳುತ್ತೇನೆ. ನಾವು ನಮ್ಮ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಮಗೆ ಎದುರಾಳಿ ವಿರುದ್ಧ ಕಡಿಮೆ ಅಂತರದ ಮತಗಳು ಬಂದವು. ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಬಹಳಷ್ಟು ಕಡಿಮೆ ಅಂತರದ ಮತಗಳು‌‌‌ ಲಭಿಸಿದ್ದು, ನಮ್ಮ ಮೇಲೆ ಜನರಿಗೆ ಭರವಸೆ ಇದೆ ಎಂದು ಡಿಕೆಶಿ ವಿಶ್ವಾಸ‌ ವ್ಯಕ್ತಪಡಿಸಿದರು.

ಚನ್ನಪಟ್ಟಣದಿಂದ ಎನ್​ಡಿಎ ಅಭ್ಯರ್ಥಿಯಾಗಿ ನಿಖಲ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಅದು ಅವರ ಪಾರ್ಟಿಗೆ ಬಿಟ್ಟಿದ್ದು. ಚನ್ನಪಟ್ಟಣದಲ್ಲಿ‌ ವ್ಯಕ್ತಿಯ ಮೇಲೆ ಚುನಾವಣೆ ‌ನಡೆಯುವುದಿಲ್ಲ, ಸಿದ್ಧಾಂತದ ಮೇಲೆ ನಡೆಯುತ್ತದೆ. ಅವರು ಯಾರನ್ನಾದರೂ ಅಭ್ಯರ್ಥಿ ಮಾಡಿಕೊಳ್ಳಲಿ. ನಾವು ನಮ್ಮ‌ ಮನೆಯನ್ನು ರಿಪೇರಿ‌ ಮಾಡಿಕೊಂಡರೆ ಸಾಕು ಎಂದು ತಿಳಿಸಿದರು.

ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಬಿಜೆಪಿ‌ ನಾಯಕರು ಹೇಳುತ್ತಿದ್ದಾರಲ್ಲಾ ಮಾಧ್ಯಮದವರ ಪ್ರಶ್ನೆಗೆ, ಬಿಜೆಪಿ‌ಯವರು ಇನ್ನೂ 10 ವರ್ಷ ಇದನ್ನೇ ಮಾತನಾಡುತ್ತಾ ಇರಲಿ, ಮುಂದಿನ ಹತ್ತು ವರ್ಷ ನಾವೇ ಸಿಎಂ ಆಗಿರುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.