ಕಡು ಬಡವರೂ ವಿಮಾನದಲ್ಲಿ ಪ್ರಯಾಣಿಸಬೇಕೆಂಬುದು ಬಿಜೆಪಿ ಧ್ಯೇಯ -ಮೋದಿ

ಶಿವಮೊಗ್ಗ: ಹವಾಯಿ ಚಪ್ಪಲಿ ಧರಿಸುವ ಕಡು ಬಡವರೂ ಕೂಡಾ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು, ಇದು ನಮ್ಮ ಸರ್ಕಾರದ ಧ್ಯೇಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ ನಂತರ ಸಮಾರಂಭದಲ್ಲಿ ಮೋದಿ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿ, ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು.

ಶಿವಮೊಗ್ಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಭಾಷಣ ಆರಂಭಿಸಿದರು.

ಶಿವಮೊಗ್ಗಕ್ಕೆ ವಿಮಾನ ನಿಲ್ದಾಣದ ದೊರೆತಿದೆ. ಇಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು ‌

ಈ ವೇಳೆ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ಮೋದಿ ನೆರದಿದ್ದ ಜನರಿಗೆ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ಬಿಎಸ್ ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಲು ಹೇಳಿದುದು ವಿಶೇಷ.

50 ವರ್ಷಗಳಿಂದ ಯಡಿಯೂರಪ್ಪನವರು ಜನಸೇವೆಯಲ್ಲಿದ್ದಾರೆ, ಡಬಲ್​ ಇಂಜಿನ್​ ಸರ್ಕಾರದಿಂದ ಅಭಿವೃದ್ಧಿಯ ರಥ ಸಾಗುತ್ತಿದೆ. ವಿಮಾನಯಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ತಿಳಿಸಿದರು.

2014 ರ ಮೊದಲು ಕೇವಲ ದೊಡ್ಡ ನಗರಗಳಿಗೆ ಮಾತ್ರ ವಿಮಾನ ನಿಲ್ದಾಣ ಸೀಮಿತವಾಗಿತ್ತು.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ನಗರಗಳಲ್ಲಿಯೂ ಏರ್​ಪೋರ್ಟ್​ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಹವಾಯಿ ಚಪ್ಪಲಿ ಧರಿಸುವ ಕಡು ಬಡವರು ಕೂಡ ವಿಮಾನದಲ್ಲಿ ಪ್ರಯಾಣಿಸಬೇಕು. ಇದು ನಮ್ಮ ಧ್ಯೇಯವಾಗಿದೆ.

ಹಳ್ಳಿ ಹಳ್ಳಿಗೂ ಏರ್‌ಪೊರ್ಟ್‌ ಸಂಪರ್ಕ ಸಾಧ್ಯವಾಗಬೇಕು. ಹೀಗಾಗಿಯೇ 74 ವಿಮಾನ ನಿಲ್ದಾಣ ನಿರ್ಮಿಸಿದ್ದೇವೆ ಎಂದು ಹೇಳಿದರು.

ಶಿವಮೊಗ್ಗ ಪಶ್ಚಿಮ ಘಟ್ಟದಲ್ಲಿ ಬರುವ ಮಲೆನಾಡಿನ ಹೆಬ್ಬಾಗಿಲು. ಇಲ್ಲಿ ನದಿ, ವನ್ಯ ಸಂಪತ್ತು ಅದ್ಭುತವಾಗಿದೆ.

ಇಲ್ಲಿ ಅದ್ಭುತ ಜೋಗ್ ಜಲಪಾತ, ಆನೆಗಳ ಬಿಡಾರವೂ ಇದೆ. ಆಗುಂಬೆಯ ಸೂರ್ಯಾಸ್ತ ಯಾರು ಮರೆಯೋದಕ್ಕೆ ಸಾಧ್ಯವಿಲ್ಲ. ಗಂಗಾ ಸ್ನಾನ, ತುಂಗಾ ಪಾನ ಎಂಬ ಉಕ್ತಿಯೇ ಇದೆ.

ಸಿಗಂದೂರು ಚೌಡೇಶ್ವರಿ, ಕೋಟೆ ಆಂಜನೇಯ ದೇವಸ್ಥಾನವಿದೆ. ಇಲ್ಲಿಗೆ ವಿಮಾನ ಪ್ರಯಾಣದ ಸಂಪರ್ಕ ಅವಶ್ಯಕವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಭಿವೃದ್ಧಿ ಆಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣವಾದರೆ ಸಾಕಷ್ಟು ಲಾಭವಾಗಲಿದೆ. ಹಾವೇರಿವರೆಗೂ ಜನರಿಗೆ ಸಂಪರ್ಕ ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಮೋದಿಯವರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನವರು ಅಭಿವೃದ್ಧಿಯನ್ನು ಮಾಡಲೇ ಇಲ್ಲ ಎಂದು ಟೀಕಿಸಿದರು.