28 ಸ್ಥಾನಗಳನ್ನೂ ಗೆಲ್ಲುವ ಗುರಿ ಇದ್ದರೂ 25 ಗೆದ್ದೇ ಗೆಲ್ಲುತ್ತೇವೆ; ಬಿ ಎಸ್ ವೈ ವಿಶ್ವಾಸ

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಗೆಲ್ಲುವ ಗುರಿ ಇದೆ ಎಂದು ಮಾಜಿ ಸಿಎಂ‌ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 28ಸ್ಥಾನದ ಗುರಿ ಇದ್ದರೂ 25 ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯಲ್ಲಿಂದು ಕರ್ನಾಟಕದ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ, ವಿಜಯೇಂದ್ರ ದೆಹಲಿಯಲ್ಲೇ ಇದ್ದಾರೆ ಎಂದು ಹೇಳಿದರು.

ಇದೇ ವೇಳೆ ಮೈಸೂರು ಲೋಕಸಭಾ ಚುನಾವಣೆಗೆ ಯದುವೀರ್ ಒಡೆಯರ್ ನಿಲ್ಲುತ್ತಾರಾ, ಸಂಪರ್ಕದಲ್ಲಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ಇದ್ದರೆ ನಾನು ಇಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಮೋದಿ ಅವರ ರಾಜ್ಯ ಪ್ರವಾಸ ಫಿಕ್ಸ್ ಆಗಿದೆ,ಅವರು ಶಿವಮೊಗ್ಗಕ್ಕೂ ಬರುತ್ತಾರೆ, ಎಲ್ಲ ಕಡೆ ಹೆಚ್ಚು ಜನ ಸೇರಿಸಬೇಕಿದೆ ಹಾಲಿ ಎಂಪಿಗಳಿಗೆ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ನಾನು ಏನೂ ಹೇಳಲಾರೆ ಎಂದು ಯಡಿಯೂರಪ್ಪ ತಿಳಿಸಿದರು.