ಆಟೋ ಬಿಡಿಭಾಗಗಳ ಮೇಲಿನ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಡಿ-ಹೆಚ್ ಡಿ ಕೆ

ನವದೆಹಲಿ: ಆಟೋ ಬಿಡಿಭಾಗಗಳ ಮೇಲೆ ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಅಟೋ ಉದ್ಯಮಕ್ಕೆ ಕೇಂದ್ರ ಭಾರೀ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ನವದೆಹಲಿಯಲ್ಲಿ ಎಸಿಎಂಎ 64ನೇ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,ಈ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.

ಅಟೋ ಉದ್ಯಮ ಬಿಡಿಭಾಗಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲೇಬೇಕು, ಹಾಗೂ ಫೇಮ್ 3 ಜಾರಿಗೆ ಬರುವ ತನಕ ಇಎಂಪಿಎಸ್ ಯೋಜನೆ ಮುಂದುವರಿಸಲಾಗುವುದು ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ದೇಶೀಯ ಆಟೋ ಬಿಡಿಭಾಗ ಉದ್ಯಮ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅಲ್ಲದೆ; ದುಬಾರಿ ಸಾರಿಗೆ, ವೆಚ್ಚಗಳ ಒತ್ತಡಕ್ಕೆ ಸಿಲುಕಿದೆ, ಇಷ್ಟಾದರೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಕ್ಷೇತ್ರದ ರಪ್ತು ವಹಿವಾಟು ಬೆಳವಣಿಗೆಯನ್ನು ಕಂಡಿದೆ ಎಂದು ಹೆಚ್ ಡಿ ಕೆ ತಿಳಿಸಿದರು.

ಈ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ, ಉತ್ಪಾದನಾ ಸಂಪರ್ಕ ಉಪಕ್ರಮ ಗಳನ್ನು ಸಾಕಷ್ಟು ಕೈಗೊಂಡಿದೆ. ಈ ಮೂಲಕ 74,850 ರೂ ಕೋಟಿ ಹೂಡಿಕೆಯನ್ನು ಉತ್ತೇಜಿಸಲಾಗಿದೆ. ಈ ಪೈಕಿ 17,836 ರೂ ಮೊತ್ತ 2024 ಮಾರ್ಚ್ ಹೊತ್ತಿಗೆ ಹೂಡಿಕೆ ಆಗಿದೆ. ಇದರ ಪರಿಣಾಮವಾಗಿ 30,500 ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ. ಇದು ಉದ್ಯಮಕ್ಕೆ ದೊಡ್ಡ ಶಕ್ತಿಯನ್ನು ತುಂಬಿದೆ ಎಂದು ಸಚಿವರು ಹೇಳಿದರು.

ಫೇಮ್ 3 ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು. ಅದುವರೆಗೂ ಆಟೋ ಕ್ಷೇತ್ರಕ್ಕೆ ಉತ್ತಜನ ನೀಡಲು EMPS ಯೋಜನೆಯನ್ನು ಮುಂದುವರಿಸಲಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಮಾವೇಶದಲ್ಲಿ ಎಸಿಎಂಎ ಅಧ್ಯಕ್ಷೆ ಶ್ರದ್ಧಾ ಸೂರಿ ಮರ್ವಾಹ್, ಎಸ್ ಐ ಎ ಎಂ ಅಧ್ಯಕ್ಷ ವಿನೋದ ಅಗರ್ವಾಲ್, ಸಿಐಐ ಅಧ್ಯಕ್ಷ ಮತ್ತು ಐಟಿಸಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ ಪೂರಿ, ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಿಸಾಶಿ ತಕೇಚಿ ಮತ್ತು ಎಸ್ ಸಿ ಎಎಲ್ ಇ ಅಧ್ಯಕ್ಷ ಡಾ. ಪವನ್ ಗೋಯಂಕ ಮತ್ತಿತರ ಉದ್ಯಮದ ಗಣ್ಯರು ಹಾಜರಿದ್ದರು.