ಲಡ್ಡು ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ: ವಿಶ್ವ ಪ್ರಸನ್ನ ಶ್ರೀ ಖಂಡನೆ

ಬೆಂಗಳೂರು: ಲಡ್ಡು ಪ್ರಸಾದವನ್ನ ಕಲಬೆರಕೆ ತುಪ್ಪ ಹಾಗೂ ಪ್ರಾಣಿಯ ಕೊಬ್ಬಿನ ಮಿಶ್ರಣದಿಂದ ತಯಾರಿಸಿದ್ದಾರೆ ಇದು ಮಹಾ ಅಪಚಾರ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಬೇಸರ ಪಟ್ಟಿದ್ದಾರೆ.

ಅಯೋಧ್ಯೆಯಲ್ಲಿ ತಿರುಪತಿ ಲಡ್ಡು ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ, ಇದು ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ ಜತೆಗೆ ಇದು ದೇವರಿಗೂ ಬಗೆದಿರುವ ಅಪಚಾರ. ಸರ್ಕಾರವೇ ಈ ಕೃತ್ಯ ನಡೆಸಿದೆ ಎಂದು ಖಂಡಿಸಿದರು.

ತಿರುಪತಿಯ ಶ್ರೀನಿವಾಸ ದೇವರು, ಗೋವಿನ ರಕ್ಷಣೆಗೆ ಅವತರಿಸಿದವ,ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ. ಇದು ಬಹುದೊಡ್ಡ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಇದಾಗಿದೆ, ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಸಿದ್ದಾರೆ ಇಂತಹ ತುಪ್ಪ ತಯಾರಿಸುವ ಅಡ್ಡಗಳನ್ನು ಕಂಡುಹಿಡಿದು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಸರ್ಕಾರದ ಹಿಡಿತದಲ್ಲಿ ಇರಬಾರದು,ಇವು ಹಿಂದೂ ಸಮಾಜದ ಕೈಯಲ್ಲಿರಬೇಕು, ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೀಗೆಯೇ ಹೇಳಿದೆ. ತಡ ಮಾಡದೆ ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ, ಹಿಂದೂಗಳ ಸಂಸ್ಥೆಗೆ ತಿರುಪತಿ ದೇವಾಲಯದ ಆಡಳಿತ ನೀಡಿ ಎಂದು ವಿಶ್ವಪ್ರಸನ್ನ ಶ್ರೀ ಆಗ್ರಹಿಸಿದರು.