ನನ್ನ ಒಂದು ದಿನಕ್ಕಾದರೂ ಜೈಲಿಗೆ ಕಳಿಸಲು ಸರಕಾರದಿಂದ ಸಂಚು -ಹೆಚ್.ಡಿ.ಕೆ

ನವದೆಹಲಿ: ಸಿದ್ದರಾಮಯ್ಯ ಅವರ ಪಟಾಲಂ ಹಿಂದೆ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಸಂಚು ಹೂಡಿತ್ತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈಗಿರುವ ಸಿದ್ದು ಪಟಾಲಂ ಕೂಡ ಅದೇ ರೀತಿಯಲ್ಲಿ ಕನಸು ಕಾಣುತ್ತಿದೆ ಎಂದು  ಆರೋಪಿಸಿದರು.

ನವದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಒಬ್ಬ ಅಧಿಕಾರಿಯ ಕರ್ಮಕಾಂಡದ ಬಗ್ಗೆ ಮಾತಾಡಿದ್ದೆ. ಮಾಧ್ಯಮಗಳ ಮುಂದೆ ಅವರ ಕಥೆಯನ್ನು ಬಯಲು ಮಾಡಿದ್ದೆ. ಆದರೆ, ಅವರು ನನ್ನ ಜೈಲಿಗೆ ಕಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯ ವಾಡಿದರು.

ನಾನು ಜಾಮೀನು ತೆಗೆದುಕೊಂಡಿದ್ದೇನೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಈ ಸರ್ಕಾರದ ಕೆಟ್ಟ ಅಧಿಕಾರಿಗಳು ಏನು ಬೇಕಾದರೂ ಮಾಡುತ್ತಾರೆ ಎಂದು ನನ್ನ ವಕೀಲರು ಜಾಮೀನು ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಅದಕ್ಕೆ ಜಾಮೀನು ಪಡೆದಿದ್ದೇನೆ ಎಂದು ಅವರು ಕುಮಾರಸ್ವಾಮಿ ಹೇಳಿದರು.

ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. 80 ಕೋಟಿ ಗುಳುಂ ಮಾಡಿರೋ ಪ್ರಕರಣ ಏನಾಯಿತು, ಎಸ್ ಐಟಿ ಯಾರನ್ನೋ ಬಂಧನ ಮಾಡಿದ್ದರು. ಯಾರೋ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದೀರಿ. ನಾನು ಯಾವುದೇ ಅಧಿಕಾರಿಯನ್ನು ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ನಾನು ಆ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ನನ್ನ ಕೇಸ್ ಬಗ್ಗೆ ಅಲ್ಲ. ರಾಜ್ಯಪಾಲರ ಕಚೇರಿ ತನಿಖೆ ಮಾಡುವುದಕ್ಕೆ ಅವಕಾಶ ಕೇಳಿ ಪತ್ರ ಬರೆದು, ಒಂದು ಖಾಸಗಿ ಚಾನೆಲ್ ಗೆ ಲೀಕ್ ಮಾಡಿರುವ ಹಿನ್ನಲೆಯಲ್ಲಿ  ನಾನು ಪ್ರಶ್ನೆ ಮಾಡಿದ್ದು ಎಂದು ಅವರು ಹೇಳಿದರು.

ನಾನು ಆ ಪೋಲಿಸ್ ಅಧಿಕಾರಿಯ ಉದ್ದಟನವನ್ನು ಖಂಡಿಸಿದ್ದೆ, ಆ ಅಧಿಕಾರಿಯ ಹಿನ್ನೆಲೆ ಏನಿದೆ ಎನ್ನುವುದನ್ನು ಹೇಳಿದ್ದೇನೆ. ಬೆಂಗಳೂರಿನ ಲ್ಯಾಂಡ್ ಮಾಫಿಯಾ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ಜತೆ ಅವರ ನೇರ ನಂಟಿದೆ. ಸಮಾಜ ವಿದ್ರೋಹಿ ಶಕ್ತಿಗಳಿಗೆ  ಸಾಥ್ ನೀಡಲು ಈ ವ್ಯಕ್ತಿಗೆ ಐಪಿಎಸ್ ಸ್ಥಾನ ಕೊಟ್ಟಿದ್ದಾರಾ ಎಂದು ಹೆಚ್‌ಡಿ ಕೆ ಕಿಡಿಕಾರಿದರು.

ಗೃಹ ಸಚಿವ ಡಾ.ಪರಮೇಶ್ವರ ಶಬ್ದಪಂಡಿತರು, ನನ್ನ ಹೆಸರು ಉಲ್ಲೇಖಿಸಿಲ್ಲ ಅಂತಾರೆ,ಸಿಎಂ ಮೇಲೂ ಆರೋಪ ಇದೆ, ನಾಳೆ ಬೆಳಗ್ಗೆ ಬಂದು ನಿಮ್ಮ ಅಧಿಕಾರಿ ನಿಮ್ಮನ್ನು ಕ್ರಿಮಿನಲ್ ಮುಖ್ಯಮಂತ್ರಿ ಅಂತಾ ಕರೆದರೆ ಏನು ಮಾಡುತ್ತೀರಿ, ನನ್ನ ವಿರುದ್ಧ ಸಿಎಂ ಕಚೇರಿಯಿಂದ ಸೋಮವಾರ ರಾತ್ರಿ ಮತ್ತೊಂದು ಪತ್ರ ದಾಖಲೆಗಳು ಹೋಗಿವೆ. ಪತ್ರದಲ್ಲಿ ಉಲ್ಲೇಖಿಸಿರುವ ಕಿಶೋರ್ ಕುಮಾರ ಅವರನ್ನು ಇವರು ಎಲ್ಲಿಗೆ ಕರೆಸಿಕೊಂಡಿದ್ದರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.