ಯಾದಗಿರಿ: ಹನಿಟ್ರ್ಯಾಪ್ನ ಡೈರೆಕ್ಟರ್ ಮತ್ತು ಪ್ರೊಡ್ಯುಸರ್ ಯಾರು ಅಂತ ಗೊತ್ತಾಗಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಒತ್ತಾಯಿಸಿದ್ದಾರೆ.
ಜಿಲ್ಲೆಯ ಮಹಲ್ ರೋಜಾದಲ್ಲಿ ಹನಿಟ್ರ್ಯಾಪ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು. ರಾಜ್ಯದಲ್ಲಿ ಇದೊಂದು ಫ್ಯಾಷನ್, ಒಂದು ಟ್ರೆಂಡ್ ಆಗಿದೆ. ಹನಿಟ್ರ್ಯಾಪ್ ಪ್ರಕರಣದಿಂದ ಇಡೀ ರಾಜ್ಯದ ಜನ ಅಸಹ್ಯಪಡುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಪಕ್ಷದವರಿದ್ದರೂ ಈ ರೀತಿ ಹನಿಟ್ರ್ಯಾಪ್ನಿಂದ ಮುಜುಗರ ಆಗುತ್ತದೆ. ರಾಜಕೀಯದಲ್ಲಿ ಹಲವು ವರ್ಷಗಳಿಂದ ಜನರ ಪ್ರೀತಿಗಳಿಸಿ, ದೊಡ್ಡ ಮಟ್ಟಕ್ಕೆ ಬೆಳೆದಿದ್ದೀವಿ.ಹಾಗಿರುವಾಗ ಹನಿಟ್ರ್ಯಾಪ್ ವಿಷಯಗಳನ್ನು ತಂದು ಮನಸ್ಸಿಗೆ ನೋವು ಮಾಡುವ ಕೆಲಸವನ್ನು ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದು ಬೇಸರ ಪಟ್ಟರು.
ಯಾವುದೇ ಪಕ್ಷದವರು ಇರಲಿ ಸಿಬಿಐ ತನಿಖೆ ಮಾಡಬೇಕು. ಜನಪ್ರತಿನಿಧಿಗಳಿಗೆ ರಕ್ಷಣೆ ಕೊಡಬೇಕು, ಅವರ ಮೇಲಿನ ವಿಶ್ವಾಸ ಉಳಿಸಬೇಕು. ಅದಕ್ಕಾಗಿ ಈ ಹನಿಟ್ರ್ಯಾಪ್ಗೆ ಕಡಿವಾಣ ಹಾಕಬೇಕು. ಸಿಬಿಐ ತನಿಖೆಯಾದರೆ ಇದರ ಹಿಂದೆ ಯಾರಿದ್ದಾರೆಂದು ಹೊರಗಡೆ ಬರುತ್ತದೆ ಎಂದು ಶ್ರೀರಾಮುಲು ಹೇಳಿದರು.
ಇದಕ್ಕಿಂತ ಮುಂಚೆ ಅನೇಕರಿಗೆ ಹನಿಟ್ರ್ಯಾಪ್ ಆಗಿದೆ. ಹಿಂದುಳಿದ ಜಾತಿಯ ವ್ಯಕ್ತಿಗಳಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಇದೀಗ ಸಚಿವ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ. ಪಕ್ಷಾತೀತಿವಾಗಿ ರಾಜಕಾರಣಿಗಳಿಗೆ ಈ ರೀತಿ ಆದರೆ ನೋವು ಉಂಟಾಗುತ್ತದೆ. ಇದಕ್ಕೆ ಯಾರು ಡೈರೆಕ್ಟರ್, ಯಾರು ಪ್ರೊಡ್ಯುಸರ್, ಈ ಹನಿಟ್ರ್ಯಾಪ್ ಫ್ಯಾಕ್ಟರಿಯನ್ನು ಯಾರು ಇಟ್ಟುಕೊಂಡಿದ್ದಾರೆ ಎನ್ನೋದು ಹೊರಬರಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರ ಕುರಿತು ಮಾತನಾಡಿ, ಸಭಾಪತಿಗಳಿಗೂ ಹನಿಟ್ರ್ಯಾಪ್ನಿಂದ ಮುಜುಗರ ಆಗಿದೆ. ಇದರಿಂದ ಅವರಿಗೂ ತೊಂದರೆ ಆಗುತ್ತದೆ. 30-40 ವರ್ಷ ರಾಜಕಾರಣದಲ್ಲಿದ್ದು, ಸಭಾಪತಿಗಳಾಗಿರುತ್ತಾರೆ. ಹನಿಟ್ರ್ಯಾಪ್ ಬೇರೆ ಬೇರೆ ವಿಚಾರ ಬಂದಾಗ ಮುಜುಗರ ಆಗುತ್ತದೆ. ಹೊರಟ್ಟಿಯವರು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾರಿಗೂ ನೋವು ಆಗಬಾರದು ಅಂದರೆ ಸಿಬಿಐ ತನಿಖೆಗೆ ಕೊಡಬೇಕು ಎಂದು ಹೇಳಿದರು.