ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ:ನಾಲ್ಕು ಮಂದಿ ದುರ್ಮರಣ

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿ ಹೊಡೆದು ಅರಸು ಮನೆತನದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕು ತೂಬಿನಕೆರೆ ಎಕ್ಸಿಟ್ ಬಳಿ ನಡೆದಿದೆ.

ಕಾರು ಬೆಂಗಳೂರಿಂದ ಮೈಸೂರು ಕಡೆಗೆ ಹೊರಟಿತ್ತು. ಈ ವೇಳೆ ಎಕ್ಸ್ ಪ್ರೆಸ್ ವೇ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲ ಉಂಟಾಗಿದ್ದು, ಮತ್ತೆ ಕಾರನ್ನು ಎಕ್ಸ್ಪ್ರೆಸ್ ವೇಗೆ ತಿರುಗಿಸಿದ್ದಾನೆ. ಇದೇ ವೇಳೆ ಹಿಂದಿನಿಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಬಂದಿದ್ದು, ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತರು ಬೆಂಗಳೂರಿನ ಜೆಪಿ ನಗರದಲ್ಲಿ ವಾಸಿಸುತ್ತಿದ್ದರು.

ಮೂಲತಃ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ತುಂಗ ನಿವಾಸಿ ಸುವೇದಿನಿ ರಾಣಿ(50), ಅವರ ಪತಿ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಮರೂರು ಗ್ರಾಮದ ಚಂದ್ರು(62),ಪಿರಿಯಾಪಟ್ಟಣ ತಾಲೂಕು ಬೇಲಾಳು ಗ್ರಾಮದ ಸತ್ಯಾನಂದ ರಾಜೇ ಅರಸ್ ಮತ್ತು ಅವರ ಪತ್ನಿ ನಿಶ್ಚಿತಾ ಮೃತಪಟ್ಟ‌ ದುರ್ದೈವಿಗಳು.

ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಪೊಲೀಸ್ ಅಧಿಕಾತಿಗಳು ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಟ್ರಾಫೀಕ್ ಜಾಮ್ ಸರಿಪಡಿಸಿ ಮೃತ ದೇಹಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಿದರು.