ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನೆ ದಿನೇ ಹೆಚ್ಚುತ್ತಿರುವ ಕಾರಣ ರಾಜ್ಯ ಸರ್ಕಾರ ಕಠಿಣ ನಿಬಂಧನೆಗಳನ್ನು ವಿಧಿಸಲು ತೀರ್ಮಾನಿಸಿದೆ.
ಶುಕ್ರವಾರ 20 ಕ್ಷೇತ್ರಗಳ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆ ನಡೆಯಲಿದೆ.
ಮತದಾನದ ಪ್ರಕ್ರಿಯೆ ಮುಗಿದ ನಂತರ ರಾಜ್ಯದಲ್ಲಿ ಸೆಮಿ ಲಾಕ್ಡೌನ್ ಮಾದರಿಯಲ್ಲಿ ನಿಬಂಧನೆ ಹಾಕಲು ಸರ್ಕಾರ ಚಿಂತನೆ ನಡೆಸಿದೆ.
ನವೋದಯ ಶಾಲೆ, ವಸತಿ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಸರ್ಕಾರ ಹೊಸ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದೆ.
ವಿಶೇಷವಾಗಿ ಕೋವಿಡ್ ಸೋಂಕು ಹೆಚ್ಚುತ್ತಿರುವ ರಾಜಧಾನಿ ಬೆಂಗಳೂರು, ತುಮಕೂರು, ಧಾರವಾಡ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕಲಬುರಗಿ, ಬೆಳಗಾವಿ ಸೇರಿದಂತೆ ಹೈ ರಿಸ್ಕ್ ಇರುವ ಜಿಲ್ಲೆಗಳಲ್ಲಿ ನೈಟ್ ಕಫ್ರ್ಯೂ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸುವರು.
ತಜ್ಞರು ನೀಡುವ ಶಿಫಾರಸ್ಸಿನ ಮೇಲೆ ರಾಜ್ಯ ಸರ್ಕಾರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಶನಿವಾರ ಇಲ್ಲವೇ ಭಾನುವಾರ ರಾತ್ರಿಯಿಂದಲೇ ನಿಯಮಗಳು ಜಾರಿಗೆ ಬರಲಿವೆ
ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಬಹುತೇಕ ಎಲ್ಲ ಚಟುವಟಿಕೆಗಳಿಗೂ ಕಡಿವಾಣ ಬೀಳಲಿದೆ.ಬಾರ್ ರೆಸ್ಟೋರೆಂಟ್, ಡಿಸ್ಕೊತೆಕ್, ಕ್ಲಬ್, ಪಬ್, ಖಾಸಗಿ ಕಚೇರಿಗಳು, ಹೋಟೆಲ್ಗಳು(ಪಾರ್ಸಲ್ಗೆ ಮಾತ್ರ ಅವಕಾಶ), ಮಾರುಕಟ್ಟೆ, ಐಟಿಬಿಟಿ ಕಂಪನಿಗಳು, ಮಾಲ್ಗಳು ಸೇರಿದಂತೆ ಜನಸಂದಣಿ ಇರುವ ಕಡೆ ಕಠಿಣ ನಿಯಮ ಜಾರಿಗೆ ಬರಲಿದೆ,ಆದರೆ ಇದು
ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ.
ಕೆಲವು ಜಿಲ್ಲೆಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡುವಂತೆ ತಜ್ಞರು ಸರ್ಕಾರಕ್ಕೆ ಈ ಹಿಂದೆಯೇ ಶಿಫಾರಸ್ಸು ಮಾಡಿದ್ದರು.