ಮಡಿಕೇರಿ: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ಗೊಂದಲದ ಬಗ್ಗೆ ಬಿಜೆಪಿ ನಾಯಕರ ಟೀಕೆ ಮುಂದುವರೆದಿದೆ.
ಇದೀಗ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡಾ ವ್ಯಂಗ್ಯವಾಡಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ವಿವಿಧ ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕ್ಷೇತ್ರ ಹುಡುಕಿಕೊಳ್ಳಬೇಕಾದ ದಯನೀಯ ಸ್ಥಿತಿ ಬಂದಿದೆ ಅಂದರೆ ಸಿದ್ದರಾಮಯ್ಯರ ಭಾಗ್ಯಗಳಿಗೆ ಜನ ಬೆಲೆ ಕೊಟ್ಟಿಲ್ಲ ಎಂದಾಯಿತು ಎಂದು ಟೀಕಿಸಿದರು.
ಅವರ ಮೇಲೆ ಜನರಿಗೆ ವಿಶ್ವಾಸ ಇಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ. ಅಂತಿಮವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಬರುತ್ತಾರೆ ಎಂದು ಲೇವಡಿ ಮಾಡಿದರು.
ದಕ್ಷಿಣ ಕರ್ನಾಟಕದ ಜನ ಕಾಂಗ್ರೆಸ್, ಜೆಡಿಎಸ್ನಿಂದ ಮಂಗಗಳಾಗಬೇಡಿ. ಯುಗಾದಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಬೇಕಿತ್ತು. ಆದರೆ ಆಗಿಲ್ಲ. ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ, ಅವರ ಪತ್ನಿಗೆ ಮಗನ ಭವಿಷ್ಯದ ಚಿಂತೆ.
ಹೆಚ್.ಡಿ.ರೇವಣ್ಣಗೆ ಭವಾನಿ ರೇವಣ್ಣರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ. ಕುಟುಂಬದ ಬಗ್ಗೆ ಚಿಂತೆ ಮಾಡುವವರಿಂದ ರಾಜ್ಯಕ್ಕೆ ಹಿತ ಸಿಗುವುದಿಲ್ಲ.
ಹಾಗಾಗಿ ಜನತೆ ಯಾವುದೇ ಕಾರಣಕ್ಕೂ ಮಂಗ ಆಗಲು ಹೋಗಬಾರದು ಉಚಿತವಾಗಿ ಕೊಡುತ್ತೀವಿ ಅಂದರೆ ಬಿಜೆಪಿಯನ್ನೂ ನಂಬಬೇಡಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.