ಬೊಮ್ಮಾಯಿ ಪರ ನಿಲ್ತೀನಿ; ಚುನಾವಣೆಗೆ ಸ್ಪರ್ಧಿಸಲ್ಲ -ಕಿಚ್ಚ

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸಲು ಬಂದಿದ್ದೇನೆ ಎಂದು ನಟ ಕಿಚ್ಚ‌ ಸುದೀಪ್ ತಿಳಿಸಿದರು.

ಬೆಂಗಳೂರಿನ ಹೊಟೇಲ್ ನಲ್ಲಿ ಬೊಮ್ಮಾಯಿ‌ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಕಿಚ್ಚ‌ ಸುದೀಪ್ ಅವರು ಮಾತನಾಡಿದರು.

ಚಿಕ್ಕಂದಿನಿಂದಲೂ ನನಗೆ ಅವರು ಪರಿಚಯ, ನನ್ನ ಕಷ್ಟ ಕಾಲದಲ್ಲಿ ನನ್ನೊಂದಿಗೆ ನಿಂತಿದ್ದಾರೆ, ಹಾಗಾಗಿ ಬೆಂಬಲ ಸೂಚಿಸುತ್ತಿದ್ದೇನೆ  ಎಂದು  ಹೇಳಿದರು.

ಬರೀ ಬೊಮ್ಮಾಯಿ ಅವರನ್ನಷ್ಟೇನಾ ಬಿಜೆಪಿಯನ್ನು ಬೆಂಬಲಿಸುತ್ತಿಲ್ಲವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸುದೀಪ್ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ.

ಆಗ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ನನಗೆ ಬೆಂಬಲಿಸುತ್ತಾರೆ ಅಂದರೆ, ಅದು ಬಿಜೆಪಿಗೆ ಬೆಂಬಲಿಸಿದಂತೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ನನ್ನ ಅಭಿಮಾನಿಗಳಿಗೆ ಸ್ಪಷ್ಟನೆ ನೀಡುತ್ತೇನೆ,  ನಾನು ಟಿಕೆಟ್ ಕೇಳುವುದಿಲ್ಲ ಎಂದು ಕಿಚ್ಚ ತಿಳಿಸಿದರು.

ಬಿಜೆಪಿ ಪರವಾಗಿ ಪ್ರಚಾರ ಮಾಡುವೆ ಎಂದೇನೂ ಅವರು ಹೇಳಲಿಲ್ಲ.ಆದರೆ ಬಸವರಾಜ ಬೊಮ್ಮಾಯಿ ಪರವಾಗಿ ನಿಂತುಕೊಳ್ಳುತ್ತೇನೆ ಎಂದಷ್ಟೇ ಹೇಳಿ ಇನ್ನೂ ಕುತೂಹಲ ಹಾಗೇ ಬಿಟ್ಟಿದ್ದಾರೆ.