ಕಾಂಗ್ರೆಸ್ ಬಗ್ಗೆ ಬೊಮ್ಮಾಯಿ ವ್ಯಂಗ್ಯ

ಶಿವಮೊಗ್ಗ: ಕಾಂಗ್ರೆಸ್‍ ಪಕ್ಷಕ್ಕೆ ಕನಿಷ್ಟ 60 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲ.ಅದಕ್ಕಾಗಿ ಬೇರೆ ಪಕ್ಷದ ಅಭ್ಯರ್ಥಿಗಳನ್ನು ಬರುವಂತೆ ಕರೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯದಿಂದ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಹಳ ಶೌರ್ಯದಿಂದ ಮಾತನಾಡುತ್ತಾರೆ ಆದರೆ ಒಳಗಡೆ ಬೇರೆಯೇ ಇರುತ್ತದೆ. ಹೀಗಾಗಿ ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸುತ್ತಾರೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‍ಗೆ ಸರಿಯಾದ ಅಭ್ಯರ್ಥಿಯೂ ಇಲ್ಲ, ಸ್ಪಷ್ಟವಾದ ನೀತಿ ಇಲ್ಲ, ಮೀಸಲಾತಿ, ಅಭಿವೃದ್ಧಿ, ಯಾವುದು ಇಲ್ಲ. ಕೇವಲ ಉಡಾಫೆ ಮಾತನಾಡಿ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂದು ಸಿಎಂ ಟೀಕಿಸಿದರು.

ಏ.7 ಹಾಗೂ 8 ರಂದು ಸಭೆ ನಡೆಸಿ ನಂತರ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಕೆಳಹಂತದ ಕಾರ್ಯಕರ್ತರು, ಪದಾಧಿಕಾರಿಗಳು, ಜನರ ಭಾವನೆ ಆಧರಿಸಿ ಈ ಬಾರಿ ಟಿಕೆಟ್ ಹಂಚಿಕೆ ನಡೆಯಲಿದೆ ಎಂದು ಬೊಮ್ಮಾಯಿ ಹೇಳಿದರು.

ಕಿಚ್ಚ ಸುದೀಪ್ ಅವರನ್ನು ಯಾರು ಬೇಕಾದರೂ ಪ್ರಚಾರಕ್ಕೆ ಕರೆಯಲಿ. ಹೋಗುವುದು, ಬಿಡುವುದು ಅವರ ಆಯ್ಕೆಗೆ ಬಿಟ್ಟಿದ್ದು.

ಅವರೇ ಸ್ಪಷ್ಟವಾಗಿ ನಾನು ಕಷ್ಟದಲ್ಲಿ ಇದ್ದಾಗ ಯಾರೂ ಸ್ಪಂದಿಸಲಿಲ್ಲ. ಬೊಮ್ಮಾಯಿ ಅವರು ಸ್ಪಂದಿಸಿದರು ಎಂದಿದ್ದಾರೆ. ಇದನ್ನು ಬೇರೆಯವರು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ತಿಳಿಸಿದರು.