ಪಂಚರತ್ನ ಜಾರಿಗೆ ಜನರಿಗೆ ತೆರಿಗೆ ಹಾಕಲ್ಲ, ಸಾಲ ಮಾಡಲ್ಲ -ಹೆಚ್.ಡಿ.ಕೆ

ಬೆಂಗಳೂರು: ಪಂಚರತ್ನ ಯೋಜನೆಗಳನ್ನು ಜಾರಿ ತರಲು ನಾನು ಒಂದು ಪೈಸೆ ತೆರಿಗೆ ಹಾಕುವುದಿಲ್ಲ ಹಾಗೂ ಒಂದು ರೂಪಾಯಿ ಸಾಲ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನಲ್ಲಿ ಬಡತನ ನಿವಾರಿಸುವ ನಿಟ್ಟಿನಲ್ಲಿ ನಾನು ರೂಪಿಸಿರುವ ಪಂಚರತ್ನ ಯೋಜನೆಗಳು ಸಂಜೀವಿನಿಯಾಗಿ ಕೆಲಸ ಮಾಡುತ್ತವೆ ಎಂದು ಅವರು ಹೇಳಿದರು.

ಬುಧವಾರ ಸಂಜೆ ಚಾಮರಾಜಪೇಟೆಯಲ್ಲಿ ಪಂಚರತ್ನ ರಥಯಾತ್ರೆ ನಡೆಸುವ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕವಾಗಿ ಹೆಸರು ಮಾಡಿರುವ ಮಹಾನಗರದಲ್ಲಿ ಬಡತನ ಇನ್ನೂ ತಾಂಡವ ವಾಡುತ್ತಿರುವುದು  ಅತ್ಯಂತ ನೋವಿನ ಸಂಗತಿ. ಈ ಬಡತನಕ್ಕೆ ಪರಿಹಾರ ಪಂಚರತ್ನಗಳಲ್ಲಿ ಇದೆ ಎಂದರು.

ಒಂದು ಬಾರಿ ನನಗೆ ಅವಕಾಶ ಕೊಡಿ, ನಾನು ಇನ್ನೂ ಇಪ್ಪತ್ತೈದು ವರ್ಷ ಅಧಿಕಾರ ಕೊಡಿ ಎಂದು ಕೇಳುವುದಿಲ್ಲ. ಅಮೃತಕಾಲ ತರುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ, ಯಾರಿಗೆ ಅವರು ಅಮೃತಕಾಲ ತರುತ್ತಾರೆ ಅವರು ಎಂದು ಕೇಳಿದ ಅವರು; ಈವರೆಗೆ ಅಧಿಕಾರದಲ್ಲಿದ್ದ ಅಲ್ಪ ಸಮಯದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ. ಪಂಚರತ್ನ ಯೋಜನೆಗಳ ಜಾರಿ ನನ್ನ ಜೀವಿತಾವಧಿಯ ಕನಸು. ಈ ಯೋಜನೆಗಳು ಜಾರಿಗೆ ಬಂದರೆ ಎಲ್ಲರ ಬದುಕು ಹಸನಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಪಂಚರತ್ನ ಯೋಜನೆಗಳು ಜಾತಿ ಧರ್ಮ ಮೀರಿದ ಉದಾತ್ತ ಕಾರ್ಯಕ್ರಮಗಳು. ನಿತ್ಯ ಬೆಳಗಾದರೆ ನನ್ನ ಮನೆಯ ಹತ್ತಿರ ಬರುವ ಜನರ ನೋವನ್ನು ಕಂಡು ರೂಪಿಸಿದ ಕಾರ್ಯಕ್ರಮ. ಈ ಯೋಜನೆಗಳು ಜಾರಿಯಾದರೆ ಕರ್ನಾಟಕ ಸರ್ಗ ಸದೃಶ ರಾಜ್ಯವಾಗುತ್ತದೆ ಎಂದು ಮಾಧ್ಯಮಗಳೇ ಬರೆದಿವೆ. ದಯಮಾಡಿ ಒಮ್ಮೆ ಅವಕಾಶ ಕೊಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡರು.

ಎಲ್ ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ, ಮಾರಣಾಂತಿಕ ಕ್ಯಾನ್ಸರ್, ಬೋನ್ ಮ್ಯಾರೋ, ಹೃದ್ರೋಗ ಸೇರಿದಂತೆ ಸರ್ವ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ, ಐದು ಲಕ್ಷ ರೂಪಾಯಿ ಮೊತ್ತದ ಉಚಿತ ಮನೆ, ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬುವ ರೀತಿಯಲ್ಲಿ ಉದ್ಯೋಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ಪಂಚರತ್ನ ಯೋಜನೆಗಳಲ್ಲಿ ಇವೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಉಜ್ವಲ ಯೋಜನೆ ಜಾರಿಗೆ ತಂದು ಅಡುಗೆ ಅನಿಲ ಸಿಲಿಂಡರ್ ಉಚಿತ ಎಂದು ಹೇಳಿತು. ಆದರೆ, ಈಗ 1150 ರೂಪಾಯಿಗೆ ಸಿಲಿಂಡರ್ ಮಾರುತ್ತಿದೆ. ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಸಿಲಿಂಡರ್ ಒಂದಕ್ಕೆ 50% ಸಬ್ಸಿಡಿ ಕೊಡುತ್ತೇವೆ ಎಂದು ಅವರು ಘೋಷಣೆ ಮಾಡಿದರು.

ಅಲ್ಲದೆ, 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ 5000 ರೂಪಾಯಿ, ವಿಧವೆಯರು ವಿಕಲಚೇತನರಿಗೆ ಮಾಸಿಕ 2500 ರೂಪಾಯಿ ಕೊಡಲಾಗುವುದು. ಆಟೋ ಚಾಲಕರಿಗೆ ಮಾಸಿಕ 2000 ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದರು.