ಡಿಕೆಶಿಯಿಂದ ಸಚಿವರೊಬ್ಬರಿಗೆ ಬ್ಲಾಕ್ ಮೇಲ್ -ರಮೇಶ್​ ಜಾರಕಿಹೊಳಿ ಆರೋಪ

ಬೆಳಗಾವಿ: ಕಾಂಗ್ರೆಸ್ ​ಗೆ ಬರ್ತಿಯೋ ಇಲ್ಲಾ ಸಿಡಿ ಬಿಡುಗಡೆ ಮಾಡ್ಲೋ ಎಂದು ಸಚಿವರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆದರಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೊಸಬಾಂಬ್ ಸಿಡಿಸಿದ್ದಾರೆ.

ಸೋಮವಾರ ಬೆಳ್ಳಂಬೆಳಿಗ್ಗೆ ಸುದ್ಧಿಗೋಷ್ಠಿಯಲ್ಲಿ ಈ‌ ವಿಷಯ ತಿಳಿಸಿದ ಅವರು ಡಿ.ಕೆ. ಶಿವಕುಮಾರ್ ಸಿಡಿಯೇ ನನ್ನ ಉದ್ಯೋಗ ಅಂತಾನೆ. ನನ್ನ ಜೊತೆಗಿನ ಒಬ್ಬ ಮಂತ್ರಿಗೆ ಡಿ.ಕೆ. ಶಿ ಹೆದರಿಸಿದ್ದಾರೆ. ನಮ್ಮ ಪಕ್ಷಕ್ಕೆ ಬರುತ್ತಿಯೋ, ಸಿಡಿ ಬಿಡ್ಲೋ ಎಂದು ಬೇದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಿಡಿ ಪಾರ್ಟ್ನರ್​ ಮತ್ತು ಆ್ಯಕ್ಟರ್ ಬೆಳಗಾವಿಯಲ್ಲೇ ಇದ್ದಾರೆ. ಅದಕ್ಕೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು.ಈಗ ಮತ್ತೊಬ್ಬ ಡ್ರೈವರ್ ಸಹ ಸೇರಿಕೊಂಡಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

ನಾವು ಯುದ್ಧ ಮಾಡುವ ಜನ ಷಡ್ಯಂತ್ರ ಮಾಡೋರು ಅಲ್ಲ. ನನ್ನ ಬಳಿ 10 ಸಾಕ್ಷಿಗಳು ಇವೆ, ನಾನು ಬಹಿರಂಗ ಮಾಡಲ್ಲ. ಅವನ ಪತ್ನಿ ನನ್ನ ತಂಗಿ ಇದ್ಧಂತೆ, ಮನೆ ಒಡೆಯಬಾರದು ಅದಕ್ಕೇ ಸುಮ್ಮನಿದ್ದೇನೆ ಎಂದು ಹೇಳಿದರು.

ಇಂತಹ ವ್ಯಕ್ತಿಯ ಕೈಯಲ್ಲಿ ರಾಜ್ಯದ ಅಧಿಕಾರ ಸಿಕ್ಕರೆ ಏನಾಗಬಹುದು. ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಕಾಂಗ್ರೆಸ್​ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ. ಪರಮೇಶ್ವರ್ ರಂತಹ, ಒಳ್ಳೇಯವರು ಇದ್ದಾರೆ.ಆದರೆ ಅವರದೇನೂ  ನಡೆಯಲ್ಲ, ಬ್ಲ್ಯಾಕ್ ಮೇಲರ್ ಕೈಯಲ್ಲಿ  ಸಿಕ್ಕಿ ಕಾಂಗ್ರೆಸ್  ಪಕ್ಷ ಮುಗಿತಿದೆ ಎಂದು ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದರು.