ಸಿದ್ದರಾಮಯ್ಯ ಮೋಸಗಾರ -ಈಶ್ವರಪ್ಪ ವಾಗ್ದಾಳಿ

ದಾವಣಗರೆ: ಸಿದ್ದರಾಮಯ್ಯನಂತ ಮೋಸಗಾರ ಇನ್ನೊಬ್ಬರಿಲ್ಲ,ಅವರ ಕಣ ಕಣದಲ್ಲೂ ಮೋಸ ತುಂಬಿದೆ ಎಂದು,ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ದೇವೇಗೌಡರಿಗೆ ಮೋಸ ಮಾಡಿ ಬಂದರು, ವಿರೋಧ ಪಕ್ಷ ಸ್ಥಾನ ಇಲ್ಲ ಅಂದ್ರೆ ಕಾಂಗ್ರೆಸ್ ನಲ್ಲೂ‌ ಅವರು ಇರುತ್ತಿರಲ್ಲ, ಅವರೇನು ಕಾಂಗ್ರೆಸ್ ಪಕ್ಷ ಕಟ್ಟಲು ಬಂದಿಲ್ಲ. ಅಹಿಂದ ಬಳಸಿ ಮೋಸ ಮಾಡಲು ಬಂದಿದ್ದಾರೆ‌ ಎಂದು ಆರೋಪಿಸಿದರು.

ಮಾಜಿ ಸಚಿವ ಬಿ.ಬಿ. ಚಿಮ್ಮನ ಕಟ್ಟಿ ಅವರಿಗೆ ಎಂಎಲ್ ಸಿ ಮಾಡ್ತಿವಿ ಅಂತ ಹೇಳಿ ಬಾದಾಮಿ ಕ್ಷೇತ್ರ ಕಿತ್ತುಕೊಂಡು ಮೋಸ ಮಾಡಿದ್ರು, ಹಾಗೆಯೇ  ಎಚ್. ಎಂ. ರೇವಣ್ಣ, ವಿಶ್ವನಾಥ್ ಗತಿ ಏನಾಗಿದೆ, ಮುಂದಿನ ದಿನಗಳಲ್ಲಿ ಇವರಿಗೆ ಚಾಮುಂಡೇಶ್ವರಿ ಕ್ಷೇತ್ರನೂ ಇಲ್ಲ, ಬಾದಾಮಿ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಲು ಅವಾಕಾಶ ಇರಲ್ಲ, ಆಗ ಬೆಂಗಳೂರಿನ ಚಾಮರಾಜಪೇಟೆಯಿಂದ ಚುನಾವಣೆಗೆ ಸ್ಪರ್ಧಿಸಲು ಜಮೀರ್ ಕೈ ಕಾಲು ಹಿಡಿಯಬೇಕು ಕಡೆಗೆ  ಮುಸ್ಲಿಂರ ಮತಗಳೇ ಗತಿ,ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಗೆ ಸೇರದಿದ್ದಕ್ಕೆ ತಿಹಾರ ಜೈಲಿಗೆ ಕಳುಹಿಸಿದರು ಎಂಬ ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಶಿವಕುಮಾರ್  ಅವರನ್ನ ಬಿಜೆಪಿಗೆ ಸೇರಿಸ್ಕೊಬೇಕಾ..?, ದೇವರು ಆ ಪರಿಸ್ಥಿತಿ ತರದಿರಲಿ ಎಂದರು.

ಅವರ ಮನೆ ಮೇಲೆ ರೈಡ್ ಆದಾಗ ಬಂಡಲ್ ಗಟ್ಟಲೇ ಹಣ, ನೋಟೀಸ್ ಸಿಕ್ಕಿತ್ತು, ಅದೆಲ್ಲ ಅವ್ಯವಹಾರ ಮಾಡಿದ ಹಣ, ಡಿಕೆಶಿ ನಮ್ಮ ಪಕ್ಷಕ್ಕೆ ಬಂದರೆ ಯಾವ ನಾಯಕರು ಒಪ್ಪಲ್ಲ, ಒಂದು ವೇಳೆ ಅವರು ಬಂದ್ರೇ ನಾವ್ಯಾರು ಅಂದು ಬಿಜೆಪಿಯಲ್ಲೇ ಇರಲ್ಲ ಎಂದು ಹೇಳಿದರು.

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಣ ಹಂಚುತ್ತಿದೆ ಎಂಬ ಆರೋಪಕ್ಕೆ ಈಶ್ವರಪ್ಪ ಪ್ರತಿಕ್ರಿಯಿಸಿ ಕಾಂಗ್ರೆಸ್ ನವರು ಮಂಡಕ್ಕಿ ಹಂಚುತ್ತಿದ್ದಾರಾ..? ಎಂದು ಖಾರವಾಗಿ ನುಡಿದರು.