ಸ್ನೇಹಮಹಿ ಕೃಷ್ಣ ಬ್ಲಾಕ್ ಮೇಲರ್ -ಎಂ.ಲಕ್ಷ್ಮಣ್ ಆರೋಪ

ಮೈಸೂರು: ಸ್ನೇಹಮಹಿ ಕೃಷ್ಣ ಬ್ಲಾಕ್ ಮೇಲರ್, ನ್ಯಾಯಾಲಯಕ್ಕೆ ಆತ ನೀಡಿರುವ ಎಲ್ಲಾ ದಾಖಲೆಗಳು ಫೇಕ್ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ವಿರುದ್ಧ 22 ಪ್ರಕರಣಗಳಿವೆ,ನಗರ ವ್ಯಾಪ್ತಿಯಲ್ಲಿ 17, ಜಿಲ್ಲೆಯಾದ್ಯಂತ 4 ಒಟ್ಟು 21ಪ್ರಕರಣಗಳಿವೆ. ಈ ಎಲ್ಲಾ ಪ್ರಕರಣಗಳು ಕೂಡ ಬ್ಲಾಕ್ ಮೇಲ್ ಪ್ರಕರಣಗಳು ಎಂದು ಹೇಳಿದರು.

ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ನೀಡಿರುವ ಎಲ್ಲಾ ದಾಖಲೆಗಳು ನಕಲಿ ಎಂದು ಮತ್ತೆ ಒತ್ತಿ ಹೇಳಿದರು ಲಕ್ಷ್ಮಣ್.

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ್, ಜುಲೈ 1 ರಂದು ಪ್ರಾಧಿಕಾರ ರಚನೆಗೆ ಸರ್ಕಾರ ಆದೇಶ ಹೊರಡಿಸಿತ್ತು. 26-07-2024ರಂದು ಪ್ರಮೋದ ದೇವಿ ಒಡೆಯರ್ ರವರು ಸ್ಟೇ ತಂದಿದ್ದರು, ಚಾಮುಂಡಿ ಬೆಟ್ಟ ನಮ್ಮ ಖಾಸಗಿ ಆಸ್ತಿ ಎಂದಿದ್ದಾರೆ. ಆದರೆ ಈ ಹಿಂದಿನಿಂದಲೂ ರಾಜ್ಯ ಸರ್ಕಾರವೇ ಚಾಮುಂಡಿ ಬೆಟ್ಟ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕರ ಒತ್ತಾಯದ ಮೇರೆಗೆ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಯಿತು, ಸಂಪೂರ್ಣವಾಗಿ ಅಧಿಕಾರಿಗಳೇ ನಿರ್ವಹಣೆ ಮಾಡುವ ಪ್ರಾಧಿಕಾರ ಇದು, ಈಗ ಪ್ರಮೋದ ದೇವಿ ಒಡೆಯರ್ ತಂದಿದ್ದ ತಡೆಯಾಜ್ಞೆಯನ್ನ ನ್ಯಾಯಾಲಯ ತೆರವುಗೊಳಿಸಿದೆ ಎಂದು ಇದೇ ವೇಳೆ ಲಕ್ಷ್ಮಣ್ ತಿಳಿಸಿದರು.

ತಡೆಯಾಜ್ಞೆ ತೆರವುಗೊಳಿಸಿರುವುದರಿಂದ ಚಾಮುಂಡಿ ಬೆಟ್ಟ ಪ್ರಾಧಿಕಾರ ಅಧ್ಯಕ್ಷರಾದ ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಭೆ ಆಯೋಜನೆ ಮಾಡಲಾಗಿದೆ. ಚಾಮುಂಡೇಶ್ವರಿ ತಾಯಿ ದೇವಸ್ಥಾನ, ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ನಾವೆಲ್ಲರೂ ಮುಂದಾಗೋಣ ಎಂದು ‌ಹೇಳಿದರು.

ಸಿದ್ದಾರ್ಥ ಟ್ರಸ್ಟ್ ಗೆ ಕೆಐಎಡಿಬಿ ಜಮೀನು ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ್, ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ರಾಜ್ಯಪಾಲರು ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲು ಪತ್ರ ಬರೆದಿದ್ದಾರೆ. ರಾಜ್ಯಪಾಲರು ಈ ವಿಚಾರವಾಗಿ ತುರ್ತಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಕುಮಾರಸ್ವಾಮಿ ವಿರುದ್ಧದ ಪ್ರಕರಣಗಳಿಗೆ ಮೌನ ವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಪಾಲರು ಬಿಜೆಪಿ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಆದರೆ ರಾಜ್ಯಪಾಲರು ನನಗೆ ಯಾವುದೇ ಪತ್ರ ಬಂದಿಲ್ಲ ಎನ್ನುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಬೆಳಿಗ್ಗೆ ಪತ್ರ ಬರೆದರೆ ಸಂಜೆಯೇ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಎಂ ಲಕ್ಷ್ಮಣ್ ದೂರಿದರು.