ಟಿಕೆಟ್ ಘೋಷಣೆ ಮಾಡಿದ ಕಾಂಗ್ರೆಸ್ ; ಬಂಡಾಯ ಭೀತಿ

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಪ್ರಕಟವಾಗಿಲ್ಲ,ಆದರೂ ಬಿರುಸಿನ ಚಟುವಟಿಕೆ ಪ್ರಾರಂಭವಾಗಿವೆ. ಕಾಂಗ್ರೆಸ್ ಒಂದು‌ ಹೆಜ್ಜೆ ಮುಂದೆ ಹೋಗಿ ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ.

ಆದರೆ ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖ ಮೈಸೂರು ಜಿಲ್ಲೆಯ ಮೂರು ಕ್ಷೇತ್ರಗಳ ಟಿಕೆಟ್  ಕಗ್ಗಂಟಾಗಿ ಉಳಿದಿದೆ.

ಮೊದಲ ಪಟ್ಟಿಯಲ್ಲಿ ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಘೋಷಣೆ ಆಗಿಲ್ಲ.

ಈ ಮೂರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ನಡುವೆ ಪೈಪೋಟಿ ಇರುವುದರಿಂದ ಒಬ್ಬರಿಗೆ ಟಿಕೆಟ್ ನೀಡಿದರೇ ಮತ್ತೊಬ್ಬರು ಬಂಡಾಯವೇಳುವ ಭೀತಿ ಇರುವದರಿಂದ ಯಾರ ಹೆಸರನ್ನೂ ಪ್ರಕಟಿಸಿಲ್ಲ.

ಚಾಮರಾಜದಲ್ಲಿ ಟಿಕೆಟ್ ಗಾಗಿ ಮಾಜಿ ಶಾಸಕ ವಾಸು ಹಾಗು ಸಿದ್ದರಾಮಯ್ಯ ಆಪ್ತ ಹರೀಶ್ ಗೌಡರಿಂದ‌ ಅರ್ಜಿ ಸಲ್ಲಿಕೆಯಾಗಿದೆ.

ವಾಸು ಅವರು ಮಾಜಿ ಸಿಎಂ ವೀರಪ್ಪಮೋಯ್ಲಿಅವರ ಪರಮಾಪ್ತ. ಇವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಬಂಡಾಯ ಎದುರಿಸಬೇಕಾಗುತ್ತದೆ ಹಾಗಾಗಿ ಸಧ್ಯ ಇನ್ನೂ ಈ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡಿಲ್ಲ.

ಈ ಮಧ್ಯೆ ಕೃಷ್ಣರಾಜ ಕ್ಷೇತ್ರದಲ್ಲೂ ಟಿಕೆಟ್ ಗಾಗಿ ಫೈಟ್ ನಡೆಯುತ್ತಿದೆ. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪ್ರದೀಪ್ ಕುಮಾರ್, ನವೀನ್ ಕುಮಾರ್ ನಡುವೆ  ಟಿಕೆಟ್ ಗಾಗಿ ಲಾಬಿ ನಡೆಯುತ್ತಿದೆ.

ಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 13 ಮಂದಿ ಆಕಾಂಕ್ಷಿಗಳಿದ್ದಾರೆ. ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಕೆಂಪನಾಯಕ, ರಾಕೇಶ್ ಪಾಪಣ್ಣ, ಮರೀಗೌಡ, ಡಾ.ಬಿ.ಜೆ.ವಿಜಯಕುಮಾರ್, ಮಂಜುಳ ಮಾನಸ ಸೇರಿ ಹಲವರು ಚಾಮುಂಡೇಶ್ವರಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಯಾರಿಗೆ ಟಿಕೆಟ್ ನೀಡಿದರೂ ಕಾಂಗ್ರೆಸ್ ಗೆ ಬಂಡಾಯ ಕಟ್ಟಿಟ್ಟ ಬುತ್ತಿ.